ಕೊಲ್ಲಮೊಗ್ರು: ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ‘ಅನುಬಂಧ’ ಸಮನ್ವಯ ಕಾರ್ಯಾಗಾರ
ಕೊಲ್ಲಮೊಗ್ರು: ಮಕ್ಕಳಿಗೆ ಕೇವಲ ಅಂಕಗಳಿಗಿಂತ ಬದುಕುವ ವಿವೇಕ, ಆತ್ಮವಿಶ್ವಾಸ ಹಾಗೂ ಜೀವನ ಕೌಶಲ್ಯಗಳು ಮುಖ್ಯ. ಪೋಷಕರು ಮಕ್ಕಳನ್ನು ಪರೀಕ್ಷೆಗೆ ಮಾತ್ರವಲ್ಲ, ಜೀವನಕ್ಕೆ ಸಿದ್ಧಪಡಿಸಬೇಕು ಎಂದು ತರಬೇತುದಾರ ಲೋಕೇಶ್ ಪೀರನಮನೆ ಹೇಳಿದರು. ಬಂಗ್ಲೆಗುಡ್ಡೆ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ಆಗಸ್ಟ್ 9ರಂದು ಕೊಲ್ಲಮೊಗ್ರು ಕೆ.ವಿ.ಜಿ. ಪ್ರೌಢಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ‘ಅನುಬಂಧ’ ಎಂಬ ವಿಶೇಷ ಸಮನ್ವಯ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ವಿಷಯ ಮಂಡಿಸಿ ಮಾತನಾಡಿದ ಲೋಕೇಶ್ ಪೀರನಮನೆ, ಇಂದಿನ ಕಾಲಘಟ್ಟದಲ್ಲಿ ಅಂಕಗಳಿಗಿಂತ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜೀವನ ಕೌಶಲ್ಯ ಅತ್ಯಗತ್ಯ ಎಂದರು. ಮನೆಯಲ್ಲಿ ಪೋಷಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿಕೊಂಡು ಮಕ್ಕಳಿಗೆ ಮಾದರಿಯಾಗಬೇಕು. ಕುಟುಂಬದ ನೈಜ ಪರಿಸ್ಥಿತಿಯ ಅರಿವು ಮಕ್ಕಳಿಗೆ ಮೂಡಿಸಿದಾಗ ಮಾತ್ರ ಅವರು ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಅವರು ತಿಳಿಸಿದರು. ಮಕ್ಕಳು ಶಾಲೆಯಲ್ಲಿರುವ 15–20 ವಿದ್ಯಾರ್ಥಿಗಳ ನಡುವೆ ಮಾತ್ರ ಉತ್ತಮ ಸಾಧನೆ ಮಾಡುವುದಷ್ಟೇ ಅಲ್ಲದೆ, ರಾಜ್ಯಮಟ್ಟದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಿದ್ಧರಾಗಬೇಕು ಎಂದು ಸಲಹೆ ನೀಡಿದರು. ಧಾನ್ಯಗಳನ್ನು ಆರಿಸುವ ಉದಾಹರಣೆ ನೀಡಿದ ಅವರು, ಜೀವನದಲ್ಲಿ ನಾವು ಯಾವುದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆಯೋ ಅದುವೇ ನಮಗ...